ಮಾನ್ವಿ:
‘ಪ್ರಾಂಶುಪಾಲರು ತಮ್ಮ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ 18ವರ್ಷ ಮೀರಿದ ವಿದ್ಯಾರ್ಥಿಗಳ ಹೆಸರುಗಳನ್ನು ಮತದಾರರ ಯಾದಿಯಲ್ಲಿ ಸೇರಿಸಲು ಸಹಕರಿಸಬೇಕು’ ಎಂದು ತಹಶೀಲ್ದಾರ್ ಸಂತೋಷರಾಣಿ ಹೇಳಿದರು.
ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಮಾನ್ವಿ ಹಾಗೂ ಸಿರವಾರ ತಾಲ್ಲೂಕುಗಳ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಅವರು ಮಾತನಾಡಿದರು.
‘ಮತದಾನ ಮಹತ್ವದ ಜವಬ್ದಾರಿಯಾಗಿದೆ. ಯುವಕರು ಹಾಗೂ ಅರ್ಹ ವಿದ್ಯಾರ್ಥಿಗಳು ಮತದಾನದ ಜವಬ್ದಾರಿಯಿಂದ ವಂಚಿತರಾಗಬಾರದು. ಈ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಆದ್ದರಿಂದ ಆಯಾ ಕಾಲೇಜ್ ಪ್ರಾಂಶುಪಾಲರು ತಮ್ಮ ಕಾಲೇಜುಗಳಲ್ಲಿನ 18 ವರ್ಷ ತುಂಬಿದ ವಿದ್ಯಾರ್ಥಿಗಳ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳಿಗೆ ಮತದಾನ ಗುರುತಿನ ಚೀಟಿ ಪಡೆಯಲು ತಿಳಿಸಬೇಕು’ ಎಂದರು.
ಸಿರವಾರ ತಾಲ್ಲೂಕು ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ, ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ತಿಪ್ಪಣ್ಣ ಎಂ.ಹೊಸಮನಿ, ಪಿ.ವಿ.ಗುರುವಿನಮಠ. ಅಬ್ದುಲ್ ಹಸನ್, ಅಮರೇಶ ನಂದರೆಡ್ಡಿ, ಹನುಮಂತ ಹರವಿ, ಬಸವರಾಜ ಭೋಗಾವತಿ, ಚನ್ನಬಸವನಾಯಕ ಗುಜ್ಜಲ್ ಪೋತ್ನಾಳ, ರಂಗಪ್ಪ ಗೋರ್ಕಲ್ ಮುಂತಾದವರು ಭಾಗವಹಿಸಿದ್ದರು.