371(ಜೆ) ಮೀಸಲಾತಿ ಕುರಿತು ವಿಚಾರಗೋಷ್ಠಿ
ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಅಗತ್ಯ-ಅಮರೇಶ ನುಗಡೋಣಿ
ಮಾನ್ವಿ ಸೆ,17: ಕಲ್ಯಾಣ ಕರ್ನಾಟಕ ಎಂದು ಕೇವಲ ಹೆಸರು ಬದಲಾವಣೆ ಮಾಡಿದರೆ ಸಾಲದು. 371(ಜೆ) ಸೌಲಭ್ಯ ಸೇರಿದಂತೆ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಿಂದ ಮಾತ್ರ ಈ ಭಾಗದ ನಿಜವಾದ ಕಲ್ಯಾಣ ಸಾಧ್ಯ’ ಎಎಂದು ಹಿರಿಯ ಕತೆಗಾರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ ಅಭಿಪ್ರಾಯಪಟ್ಟರು. ಇಂದು ಮಾನ್ವಿ ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಬಹುಜನ ಸಂಘರ್ಷ ಸಮಿತಿ ಆಯೋಜಿಸಿದ್ದ ‘ನಿಜವಾದ ಕಲ್ಯಾಣ ಕರ್ನಾಟಕಕ್ಕಾಗಿ 371(ಜೆ) ಮೀಸಲಾತಿ ತಿಳಿಯೋಣ ಬನ್ನಿ, ಪಡೆಯೋಣ ಬನ್ನಿ’ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಿಜಾಮರ ಆಳ್ವಿಕೆಯಿಂದ ವಿಮುಕ್ತಿ ಪಡೆದ ನಂತರ ಈ ಭಾಗದಲ್ಲಿ ಇಂದಿಗೂ ಅನಕ್ಷರತೆ, ಬಡತನ, ನಿರುದ್ಯೋಗ, ವಲಸೆ ಸೇರಿದಂತೆ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳೂ ಕೂಡ ಸಿಗದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಭಾಗದ ಜನರ ದುಃಖ ದುಮ್ಮಾನ ಮತ್ತು ದೈನಂದಿನ ಭವಣೆಗಳನ್ನು ನೀಗಿಸಿದಾಗ ಮಾತ್ರ ನಿಜವಾದ ಕಲ್ಯಾಣ ಸಾಧ್ಯ’ ಎಂದರು
‘ಪ್ರಾದೇಶಿಕ ಅಸಮತೋಲನೆ ನಿರ್ಮೂಲನೆಗಾಗಿ ಜಾರಿಗೆ ತಂದ 371(ಜೆ) ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಖಾಲಿ ಹುದ್ದೆಗಳ ಭರ್ತಿ, ಉದ್ಯೋಗ ಸೃಷ್ಟಿ, ವಲಸೆ ತಡೆ, ಬಾಲ್ಯ ವಿವಾಹ ತಡೆಯುವಂತಹ ಕಾಯ್ದೆ ಮತ್ತು ಯೋಜನೆಗಳಿಗೆ ಸರಕಾರ ಹೆಚ್ಚಿನ ಒತ್ತು ನೀಡಬೇಕು’ ಎಂದು ಅವರು ಸಲಹೆ ನೀಡಿದರು.
ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಬಹುಜನ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ನೇತಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ. ವಿಜಯಲಕ್ಷ್ಮೀ, ಜನಶಕ್ತಿ ಸಂಘಟನೆಯ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ, ಲಕ್ಷ್ಮಣ ಜಾನೇಕಲ್, ಪತ್ರಕರ್ತ ಹೊನ್ನಪ್ಪ ಶಾಖಾಪೂರು ಇದ್ದರು.