ಕಲ್ಯಾಣ ಕಾವ್ಯ : ಯೋಚಿಸು ನೀನೇನಾಗಬೇಕೆಂಬುದನು – ಮುಕ್ಕಣ್ಣ ಕರಿಗಾರ

ಯೋಚಿಸು ನೀನೇನಾಗಬೇಕೆಂಬುದನು

      ಮುಕ್ಕಣ್ಣ ಕರಿಗಾರ

ಯಾರು ಏನಾದರೇನು
ಯಾರು ಎಲ್ಲಿಗೆ ಬಂದರೇನು
ಯೋಚಿಸು ಮೊದಲು ಏನಾಗಬೇಕು
ನೀನು ಎಂಬುದನು.

ಸುತ್ತುತ್ತಿರುವ ಪ್ರಪಂಚವಿದು
ನಿಲ್ಲದು ನಿಂತಲ್ಲಿಯೆ
ಮೇಲಿದ್ದವರು ಕೆಳಗೆ
ಕೆಳಗಿದ್ದವರು ಮೇಲೆ ಬರಲೇಬೇಕು

ಅವರು ಇವರು ಬಂದುಕುಳಿತ
ಖುರ್ಚಿಗಳ ಬಗೆಗೇಕೆ ಕಳವಳ ?
ಎಲ್ಲರಿಗು ಮಿಗಿಲು ಎತ್ತರದ
ಸ್ಥಾನಕ್ಕೇರುವ ಕನಸು ಕಾಣು

ಕನಸುಗಳಿಗೆ ಬಣ್ಣತುಂಬು
ಹರಿಯಬಿಡು ಮಹತ್ವಾಕಾಂಕ್ಷೆಯ
ಹಕ್ಕಿಯನು ರೆಕ್ಕೆಬಡಿದು ಹಾರಲು
ಆಕಾಶದುದ್ದಕ್ಕು.ಗೆಲುವು ನಿನಗುಂಟು.

ರೂಪಿಸುವುದಿಲ್ಲ ಇಲ್ಲಿ ಯಾರೂ ಯಾರ ಬಾಳನ್ನು
ನೀನೇ ನಿನ್ನ ಬಾಳಶಿಲ್ಪಿ
ನಿನ್ನ ಉದ್ಧಾರವು ನಿನ್ನ ಕೈಯ್ಗಳಲ್ಲೆ !
ನಿನ್ನ ನೀನರಿ! ಮುಂದೆನಡೆ!

ಒಂದಡಿಯ ಗಟ್ಟಿತನದಿ ಮುಂದಿಡೆ ನೀನು
ಮುಂದೆಬರುವಳು ಅದೃಷ್ಟದೇವಿ
ಹತ್ತು ಅಡಿಗಳನ್ನಿಟ್ಟು ನಿನ್ನೆಡೆಗೆ
ಇಡು ನೀನು ಮೊದಲು ಹೆಜ್ಜೆ,ನಡೆ ಮುಂದೆ,ಮುನ್ನುಗ್ಗು,ಗೆಲುವು ನಿನ್ನದೆ !

ಮುಕ್ಕಣ್ಣ ಕರಿಗಾರ

31.01.2022