ಮಾನ್ವಿ: ಬೆಳಕು ಟ್ರಸ್ಟ್ ವತಿಯಿಂದ ಕಾಲೇಜು ಸಾಹಿತ್ಯ ಸಂಭ್ರಮ, ಪ್ರಶಸ್ತಿ ಪ್ರದಾನ ಸಮಾರಂಭ
ಪುಸ್ತಕ ಓದುವ ಸಂಸ್ಕೃತಿ ಬೆಳೆಸಲು ಕರೆ
ಪ್ರಜಾವಾಣಿ ವಾರ್ತೆ
ಮಾನ್ವಿ.ಜ.05:‘ಬದಲಾದ ಜೀವನ ಶೈಲಿಯಿಂದಾಗಿ ಇಂದಿನ ಯುವ ಪೀಳಿಗೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ. ಕಾರಣ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ಬೆಳೆಸುವುದು ಅವಶ್ಯ’ ಎಂದು ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು. ಬುಧವಾರ ಪಟ್ಟಣದಲ್ಲಿ ಬೆಳಕು ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ, ಕಾಲೇಜು ಸಾಹಿತ್ಯ ಸಂಭ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ ಉಪನ್ಯಾಸಕರು ನಾಡಿನ ಕವಿಗಳು ಹಾಗೂ ವಚನಕಾರರು ರಚಿಸಿದ ಸಾಹಿತ್ಯವನ್ನು ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ರೂಢಿಸಬೇಕು’ ಎಂದು ಅವರು ಸಲಹೆ ನೀಡಿದರು.
ಬೆಳಕು ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಮಾತನಾಡಿ, ‘ ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಕುರಿತು ಅಭಿರುಚಿ ಹೆಚ್ಚಿಸಲು ಮತ್ತು ಬರವಣಿಗೆಯಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಲು ಕಾಲೇಜು ಸಾಹಿತ್ಯ ಸಂಭ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು. ರಾಷ್ಟ್ರಕವಿ ಕುವೆಂಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವು ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಕಲ್ಲೂರಿನ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು. ನಿವೃತ್ತ ಉಪನ್ಯಾಸಕ ರೇವಣಸಿದ್ದಯ್ಯ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ನಾರಾಯಣಪ್ಪ ಮಾಡಶಿರವಾರ, ಖ್ಯಾತ ಚಿತ್ರಕಲಾವಿದ ವಾಜಿದ್ ಸಾಜಿದ್, ಎನ್.ಅಮರೇಶ ಸಿಂಧನೂರು, ಸಾಹಿತಿ ವೆಂಕನಗೌಡ ವಟಗಲ್, ರಮೇಶಬಾಬು ಯಾಳಗಿ, ಬೀರಪ್ಪ ಶಂಭೋಜಿ, ರವಿಕುಮಾರ ಪಾಟೀಲ್, ಚನ್ನಬಸವ ಬಾಗಲವಾಡ, ತಾಯಪ್ಪ ಬಿ.ಹೊಸೂರು, ಚಂದ್ರಶೇಖರ ಮದ್ಲಾಪೂರ, ಶರಣೇಗೌಡ ಯರದೊಡ್ಡಿ, ಸಂಗೀತಾ ಸಾರಂಗಮಠ, ಶಾಂತಾ ಮತ್ತಿತರರು ಇದ್ದರು.