ಕಲಬುರಗಿ: ಎಐಡಿವೈಒ ಸಂಘಟನೆಯ ೫ನೇ ರಾಜ್ಯ ಮಟ್ಟದ ಯುವಜನ ಸಮ್ಮೇಳನದಲ್ಲಿ ರಾಜ್ಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಹೋರಾಟವು ಉನ್ನತ ಸಂಸ್ಕೃತಿಗೆ ಜನ್ಮ ನೀಡುತ್ತದೆ – ಕಾಮ್ರೆಡ್ ಪ್ರತಿಭಾ ನಾಯಕ್

ಕಲಬುರಗಿ: ‘ಸಮಾಜವನ್ನು ಬದಲಾಯಿಸುವ ಹೋರಾಟಕ್ಕೆ ಕಾಲಿಡುವ ಯುವಜನರು ಮೊದಲು ತಮ್ಮನ್ನೇ ಬದಲಾಯಿಸಿಕೊಳ್ಳಬೇಕು, ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟಬೇಕು. ಆ ಹೋರಾಟಗಳ ಮೂಲಕವೇ ನಮ್ಮ ಚಾರಿತ್ರ್ಯ ಮೇಲೇರುತ್ತದೆ.” ಎಂದು ಎಐಡಿವೈಒ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಪ್ರತಿಭಾ ನಾಯಕ್ ಅವರು ನುಡಿದರು.

ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಓ) ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ ಕಲಬುರಗಿ ನಗರದ ಶಮ್ಸ್ ಫಂಕ್ಷನ್ ಹಾಲ್‌ನಲ್ಲಿ ನಡೆದ ೫ನೇ ರಾಜ್ಯ ಮಟ್ಟದ ಯುವಜನ ಸಮ್ಮೇಳನದ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಇಂದು ನಮ್ಮ ಸಮಾಜದಲ್ಲಿ ಮೌಲ್ಯಗಳು ನಶಿಸುತ್ತಿವೆ. ಆದರೆ ನಾವು ಕಳೆದುಕೊಳ್ಳಬಾರದು. ಹೇಗೆ ಸುಗಂಧಯುಕ್ತ ಹೂವೊಂದು ತಾನಿರುವ ಸ್ಥಳವನ್ನು ಪರಿಮಳಯುಕ್ತಗೊಳಿಸುವುದೋ ಹಾಗೆಯೇ ಸಚ್ಚಾರಿತ್ರ್ಯವುಳ್ಳ ಯುವಕರಾಗಿ ನಾವು ನಮ್ಮ ಸಮಾಜದಲ್ಲಿಯೂ ಉನ್ನತ ಚಾರಿತ್ರ್ಯ ಮತ್ತು ಮೌಲ್ಯಗಳನ್ನು ಬೆಳೆಸಬೇಕು” ಎಂದು ಹೇಳಿದರು. ‘ಕೋವಿಡ್‌ನ ಸಂದರ್ಭದಲ್ಲಿ ಸರ್ಕಾರವು ಸಾಕಷ್ಟು ಜನವಿರೋಧಿ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಉದ್ಯಮಗಳನ್ನು ಖಾಸಗಿ ಬಂಡವಾಳಿಗರಿಗೆ ಉಡುಗೊರೆಯಾಗಿ ನೀಡಿದೆ. ಪ್ರಪಂಚದಲ್ಲೇ ದೊಡ್ಡ ಪ್ರಜಾಪ್ರಭುತ್ವವೆಂದು ಬೀಗುವ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಹರಣವಾಗುತ್ತಿದೆ. ಅವುಗಳನ್ನು ರಕ್ಷಿಸಲು ನಾವು ಹೋರಾಟ ಬೆಳೆಸಬೇಕು’ ಎಂದರು. ‘ಇಂದು ದೇಶದಾದ್ಯಂತ ಯುವಜನರು ತಮ್ಮ ವಿರುದ್ಧ ಸರ್ಕಾರ ತರುವ ನೀತಿಗಳ ವಿರುದ್ಧ, ತಮ್ಮ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ನಾಯಕತ್ವಕ್ಕಾಗಿ ನಮ್ಮ ಸಂಘಟನೆಯತ್ತ ನೋಡುತ್ತಿದ್ದಾರೆ. ಅವರನ್ನು ಸಂಘಟಿಸಿ ಹೋರಾಟವನ್ನು ಒಂದು ಗಮ್ಯಕ್ಕೆ ಒಯ್ಯುವ ಹೊಣೆ ನಮ್ಮದು. ನಮಗಾಗಿ ಬದುಕುವುದಷ್ಟೇ ನಿಜವಾದ ಬದುಕಲ್ಲ, ಪರರಿಗಾಗಿ ಬದುಕುವವರು ನಿಜವಾದ ಮಾನವರು. ನಮ್ಮ ನಡುವೆ ಇರುವ ಯುವಕರಲ್ಲಿ ಅಂತಹ ಗುಣವುಳ್ಳ ಯುವಜನರಿದ್ದಾರೆ. ಅಂಥವರನ್ನು ಹುಡುಕಿ ಅವರಿಗೆ ವೈಚಾರಿಕತೆಯನ್ನು ನೀಡಿ ಯುವ ಸಂಘಟನಕಾರರಾಗಿ ಬೆಳೆಸುವ ಹೊಣೆಯನ್ನು ನೀವು ತೆಗೆದುಕೊಳ್ಳಬೇಕು’ ಎಂದು ಅವರು ಪ್ರತಿನಿಧಿಗಳಿಗೆ ಕರೆ ನೀಡಿದರು.
ಈ ಪ್ರತಿನಿಧಿ ಅಧಿವೇಶನದಲ್ಲಿ ಸಮ್ಮೇಳನದ ಮುಖ್ಯ ಗೊತ್ತುವಳಿ, ಸಂಘಟನಾತ್ಮಕ ವರದಿ ಮತ್ತು ೨ ಉಪಗೊತ್ತುವಳಿಗಳನ್ನು ಮಂಡಿಸಿ, ಚರ್ಚಿಸಿ ಅಂಗೀಕರಿಸಲಾಯಿತು. ಇವುಗಳನ್ನು ಕುರಿತು ಸುಮಾರು ೭೫ ಪ್ರತಿನಿಧಿಗಳು ಮಾತನಾಡಿದರು.

ಈ ಸಂದರ್ಭದಲ್ಲಿ ಹೊಸ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ರಾಜ್ಯ ಸಮಿತಿಯ ವಿವರ ಇಂತಿದೆ. ರಾಜ್ಯ ಸಮಿತಿಯ ನೂತನ ಅಧ್ಯಕ್ಷರಾಗಿ ಶರಣಪ್ಪ ಉದ್ಬಾಳ್, ಉಪಾಧ್ಯಕ್ಷರುಗಳಾಗಿ ಚನ್ನಬಸವ ಜಾನೇಕಲ್-ರಾಯಚೂರು, ವಿಜಯಕುಮಾರ್ -ಚಿತ್ರದುರ್ಗ, ಕೃಷ್ಣ -ಬೆಂಗಳೂರು, ಜಗನ್ನಾಥ ಎಸ್.ಎಚ್ -ಕಲಬುರಗಿ, ವಿನಯ ಸಾರಥಿ- ಬೆಂಗಳೂರು, ಕಾರ್ಯದರ್ಶಿಗಳಾಗಿ ಸಿದ್ದಲಿಂಗ ಬಾಗೇವಾಡಿ, ಕಛೇರಿ ಕಾರ್ಯದರ್ಶಿ & ಖಜಾಂಚಿಯಾಗಿ ಜಯಣ್ಣ ಬೆಂಗಳೂರು ಆಯ್ಕೆಯಾದರು. ಸೆಕ್ರಟರಿಯಟ್ ಸದಸ್ಯರುಗಳಾಗಿ ಭವಾನಿ ಶಂಕರಗೌಡ ಧಾರವಾಡ, ಶ್ರೀಕಾಂತ ಕೊಂಡಗೂಳಿ ಬಿಜಾಪುರ, ಶರಣು ಗಡ್ಡಿ ಕೊಪ್ಪಳ, ಸುನೀಲ್ ಮೈಸೂರು, ಸುಮಾ ಮೈಸೂರು, ಜಗದೀಶ್ ನೇಮಕಲ್ ಬಳ್ಳಾರಿ, ಅಂಬಿಕಾ ಕಲಬುರಗಿ ಇವರ ಜೊತೆಯಲ್ಲಿ ೨೯ ಸದಸ್ಯರ ಕಾರ್ಯಕಾರಿ ಸಮಿತಿ ಹಾಗೂ ೨೦ ಜನ ಕೌನ್ಸಿಲ್ ಸದಸ್ಯರು ಸೇರಿದಂತೆ ೬೪ ಸದಸ್ಯ ಬಲದ ಬಲಿಷ್ಠ ಸಮಿತಿಯನ್ನು ಆಯ್ಕೆ ಮಾಡಲಾಯಿತು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ನೂರಾರು ಪ್ರತಿನಿಧಿಗಳು ಹಾಗೂ ಕಲಬುರಗಿಯ ನೂರಾರು ಯುವಜನರು ಈ ಸಮ್ಮೇಳನದ ಸಂದೇಶ ಹೊತ್ತು ಯುವಜನರ ನೈಜ ಸಮಸ್ಯೆಗಳ ವಿರುದ್ಧ ಹೊಸ ಹೋರಾಟಗಳನ್ನು ಬೆಳೆಸುವ ಉತ್ಸಾಹದೊಂದಿಗೆ ತಮ್ಮ ತಮ್ಮ ಸ್ಥಳಗಳಿಗೆ ಮರಳಿದರು.

ವರದಿ: ವಿನೋದ್, ಎಐಡಿವೈಒ, ರಾಯಚೂರು