ಮಾನ್ವಿ ಅ.11:ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ಈಚೆಗೆ ನಡೆದ ಪರಿಶಿಷ್ಟ ಜಾತಿ ಮಹಿಳೆಯ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಕರ್ನಾಟಕ ಮಾದಿಗ ಮಹಾಸಭಾದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ ತೀವ್ರವಾಗಿ ಖಂಡಿಸಿದ್ದಾರೆ.
ಇಂದು ಮಾನ್ವಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟನೆಯಲ್ಲಿ ಮೃತ ಮಹಿಳೆಯ ಕುಟುಂಬಕ್ಕೆ ರೂ1ಕೋಟಿ ಪರಿಹಾರ ನೀಡಬೇಕು. ಘಟನೆ ತಡೆಯಲು ವಿಫಲರಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಪ್ರತಿ ತಿಂಗಳು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಜನಾಂಗದ ಕುಂದು ಕೊರತೆ ಸಭೆ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು’ ಎಂದು ಅವರು ಒತ್ತಾಯಿಸಿದರು.‘ ಚೌಡೇಶ್ವರಿಹಾಳ ಘಟನೆ ಖಂಡಿಸಿ ಅ.11ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕರ್ನಾಟಕ ಮಾದಿಗ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು. ಮಹಾಸಭಾದ ಮುಖಂಡರಾದ ಸುಂದರ ಕಪಗಲ್, ಸ್ವಾಮಿದಾಸ್ ಕುರ್ಡಿ, ಯೇಸು ಅಮರೇಶ್ವರ ಕ್ಯಾಂಪ್, ಅಲ್ಲಮಪ್ರಭು, ಗಂಗಪ್ಪ ಕೊಟ್ನೇಕಲ್, ಕೆಂಚಪ್ಪ, ಪ್ರದೀಪ್ ಕಪಗಲ್ , ತಿಮ್ಮಯ್ಯ ಇದ್ದರು.